ಪ್ರತಿಯೊಬ್ಬನ ಬಾಳಿನ ಕತೆಯೂ ಒಂದು ಅತ್ಯುತ್ತಮ ಚರಿತ್ರೆಯಾಗುತ್ತದೆ. ಬರೆಯುವ ಹದವನ್ನು ಬಲ್ಲವನಿಗೆ ಬಾಳೇ ಒಂದು ಕಲೆ. ಅದನ್ನು ಮಸಿಯಲ್ಲಿ ಮೂಡಿಸುವುದು ಸೂಕ್ಷ್ಮಕಲೆ, ಕುಸುರಿನ ಕೆಲಸ.
ಮೂರ್ಖನು ತನ್ನ ಅನುಭವದಿಂದ ಕಲಿಯುತ್ತಾನೆ. ಜಾಣನು ಮೂರ್ಖನ ಅನುಭವದಿಂದ ಕಲಿಯುತ್ತಾನೆ. ನನ್ನ ತಪ್ಪೊಪ್ಪುಗಳು ಮುಂದಿನ ಪೀಳಿಗೆಗೆ ಪಾಠವಾಗಲಿ ಎಂಬುದೆ ನನ್ನಾಸೆ. ಹಿಂದಿನವರ ತಪ್ಪುಗಳನ್ನು ಅರಿತು ಮುಂದಿನವರು ಹೆಜ್ಜೆ ಇಟ್ಟರೆ ಒಳಿತಲ್ಲವೆ? ಹಳಬರ ಬಾಳು ಹೊಸ ಜೀವ ಸಸಿಗೆ ಗೊಬ್ಬರ.
ಸಂಪ್ರದಾಯ ಎಂಬುದು ಒಂದು ದಾರಿಯನ್ನು ತೊರಿಸುತ್ತದೆ ಮಾತ್ರ, ಬೆತ್ತವನ್ನು ಹಿಡಿದು ನಿಂತು ಈ ದಿಕ್ಕಿಗೆ ಹೋಗು ಎಂದು ಹೇಳುವ ಅಧಿಕಾರ ಅದಕ್ಕಿಲ್ಲ.
ಮಾನವ ತನ್ನ ದೌರ್ಬಲ್ಯದ ಪರಿಣಾಮವಾಗಿ ದೇವರನ್ನು ಸೃಷ್ಟಿಸಿಕೊಂಡ. ಆ ದೇವರಿಂದಲೇ ತನ್ನ ಸೃಷ್ಟಿಯಾಯಿತೆಂದು ಆರೋಪಿಸಿದ. ಆ ಅದೇ ದೇವರು ತನ್ನ ಸೃಷ್ಟಿಯ ಪ್ರಾಣಗಳನ್ನು ಶಿಕ್ಷಿಸುತ್ತಾನೆ, ಇನಾಮು ಕೊಡುತ್ತಾನೆ ಎಂಬುದನ್ನು ನಾನೊಪ್ಪಲಾರೆ. ಈ ದೇಹವು ಬಿದ್ದು ಹೋದ ನಂತರ ಮನುಷ್ಯ ಇನ್ನೂ ಇರುತ್ತಾನೆ ಎಂಬುದನ್ನು ನಾ ನಂಬಲಾರೆ. ಈ ಭಾವನೆಗೆ ಕಾರಣ ಮಾನವನಲ್ಲಿಯ ಭಯ ಅಥವಾ ಅಹಂಕಾರ.
ಒಬ್ಬನು ಸತ್ತ ನಂತರ ಉಳಿಯುವುದೇನು? ಚರಿತ್ರೆ ಪುಸ್ತಕದಲ್ಲಿ ಅವನ ಬಗ್ಗೆ ನಾಲ್ಕು ಪುಟಗಳು, ಮುಂದಿನ ಪೀಳಿಗೆ ಇವನ ಮೂರ್ಖತನವನ್ನು ಕಂಡು ನಗಲೆಂದು…
ಯಾವನ ಬಾಳೂ ಬಾಳಲಾರದಷ್ಟು ಬಾಳಬಾರದಷ್ಟು ಕಷ್ಟವಲ್ಲ. ಕನಿಷ್ಠವೂ ಅಲ್ಲ. ಬಾಳಿನಿಂದ ಓಡಿಹೋಗಬೇಡ. ಅದನ್ನು ಇದಿರಿಸು. ಅದನ್ನೇ ಬಾಳು. ನಿನ್ನ ಬಾಳು ನಿನ್ನಷ್ಟು ಕೆಡುಕಲ್ಲ. ಅದನ್ನು ಪ್ರೀತಿಸು. ಪ್ರೀತಿ ನಿನ್ನ ಬಾಳ ಹೊರೆಯನ್ನು ಹಗುರ ಮಾಡುತ್ತದೆ. ನಿನ್ನ ಹೃದಯದಲ್ಲಿ ದ್ವೇಷಕ್ಕೆ ಮಾತ್ರ ಎಂದೂ ಇಂಬು ಕೊಡಬೇಡ. ಪ್ರೇಮವೇ ಬೆಳಕು. ದ್ವೇಷವೇ ಕತ್ತಲು. ನೀನೇ ಸೃಷ್ಟಿಸಿಕೊಂಡ ಕತ್ತಲಲ್ಲಿ ನೀನೇ ದಾರಿ ತಪ್ಪೀಯಾ ! ಎಡವಿ ಬಿದ್ದೀಯಾ, ಎಚ್ಚರಿಕೆ!!!
ಭಯಾಗ್ರಫಿ ಓದಬೇಕು ಅಂತ ಇತ್ತು..ಈಗ ಖಂಡಿತ ತಂದು ಓದ್ತ್ತೇನೆ.
ಪ್ರತ್ಯುತ್ತರಅಳಿಸಿನಿಮ್ಮ ಬ್ಲಾಗ್ ಚೆನ್ನಾಗಿದೆ.
ಬರೆಯುತ್ತಿರಿ.
ಸ್ವರ್ಣಾ
ಧನ್ಯವಾದ...
ಅಳಿಸಿ