ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ ಉತ್ತರವನ್ನು ಹೇಳಿಕೊಳ್ಳುತ್ತೇವೆ. ನಮಗೆ ಇಷ್ಟ ಕಂಡಂತೆ ನಡೆದಾಗ ದೇವರ ಇಚ್ಛೆ ಅನ್ನುತ್ತೇವೆ . ಅನಿಷ್ಟ ಪ್ರಾಪ್ತಿಸಿದಾಗ ಅನಿಷ್ಟ ಎನ್ನುತ್ತೇವೆ.
ಹೆಂಡತಿ ಮಕ್ಕಳನ್ನು ಬಿಟ್ಟರು ದಾಸರು. ವಿಠಲನನ್ನು, ನಾರಾಯಣನನ್ನು ನಂಬಿ ಹಾಡಿದರು. ನಂಬಿದ್ದೆ ನಂಬಿದ್ದು ಹಾಡಿದ್ದೆ ಹಾಡಿದ್ದು . ಅವರು ತಮ್ಮ ಹೆಂಡಿರನ್ನು ದಾರಿ ಮೇಲೆ ಕೆಡೆದು ಹೋದದ್ದು ನಿಜ . ಹಾಗೆ ಮಾಡಿ ಬೇಡಿದ್ದು ಯಾರನ್ನು? ತಂತಮ್ಮ ಹೆಂಡಿರೊಡನೆ ಸುಖವಾಗಿ ವೈಕುಂಠದಲ್ಲೋ, ಕೈಲಾಸದಲ್ಲೋ ಇರುವಂಥ ವಿಷ್ಣುವನ್ನು , ಶಿವನನ್ನು. ಅವರೇನು ಕೊಟ್ಟಾರು? ಅವರಿಗೂ ಅವರ ಹೆಂಡಂದಿರಿಂದ ಮುಕ್ತಿ ಸಿಗದೇ ಇರುವಾಗ ?
ಅರ್ಜುನನಿಗೆ ಕೃಷ್ಣ ಪರಮಾತ್ಮ ಅಷ್ಟು ದೊಡ್ಡ ಭಗವದ್ಗೀತೆ ಹೇಳಿದ ಅನ್ನುತ್ತಾರೆ ; ಹೇಳಿದ್ದೆಲ್ಲಿ ? ಕುರುಕ್ಷೇತ್ರದಲ್ಲಿ ; ಧರ್ಮರಾಜ , ಕೌರವ ಯುಯುಧಾನ, ಸಾತ್ಯಕಿಗಳು ಅವರವರ ಶಂಖಗಳನ್ನು ಅವರವರು ಊದಿದ ಮೇಲೆ ಇನ್ನೇನು ? ಯುಧ್ಧ ತೊಡಗಿತು ಅನ್ನುವಾಗ ಅಲ್ಲಿ ಕೃಷ್ಣ ಮೂರು ದಿನಗಳ ಹರಿಕಥೆಯನ್ನು ಒಬ್ಬ ಅರ್ಜುನನ ಮುಂದೆ ನಡೆಸಿದ . ಅಂದರೆ ಆಗ ಉಳಿದವರೆಲ್ಲರೂ ಏನು ಮಾಡಿದರೋ ? ಯುಧ್ಧವನ್ನು ಬಿಟ್ಟು ಮನೆಗೆ ಹೋಗಿ, ತಿರುಗಿ ಅಲ್ಲೆಗೆ ಬಂದರೋ ?
‘ಆತ್ಮಕ್ಕೆ ಸಾವಿಲ್ಲ ’ ಅಂದಿದ್ದ ಕೃಷ್ಣ ‘ಅದೇನೇ ನಿಜ .ಈ ದೇಹವಲ್ಲ ’ ಅಂದ .
‘ನೀನು ಕೊಲ್ಲುವುದಲ್ಲ , ಮಾಡುವುದಲ್ಲ ’ ಅಂದ .
ಇದೆಲ್ಲ ಲೆಕ್ಕಾಚಾರ ಸಮವೇ.
‘ನೀನು ನಿನ್ನ ಕರ್ಮ ಮಾಡು ; ಅದರ ಫಲವನ್ನು ಅಪೇಕ್ಷಿಸಬೇಡ ’ ಅಂದ .
ನೀನು ಯುಧ್ಧದಲ್ಲಿ ಕೊಂದರೆ, ಸತ್ತರೆ ನಿನಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ‘ ಅಂದ ಅವನೇ .
‘ಸ್ವರ್ಗದ ಅಪೇಕ್ಷೆ ಮಾಡುವುದು ತಪ್ಪು' ಎಂದದ್ದೂ ಅವನೇನೇ .
‘ಕಾಮ -ಕ್ರೋಧಗಳು ಕೆಟ್ಟದ್ದು ’ ಎಂದವನು ಅವನೇ ; ‘ಕೋಪಕ್ಕೆ ಬಲಿಯಾಗಿ ಬಾಣಬಿಡು ‘ ಎಂದವ ಅವನೇ .
‘ದೇಹ ಮುಖ್ಯವಲ್ಲ ’ ಅಂದವನೂ ಅವನೇ ; ‘ಕೌರವರ ದೇಹವನ್ನು ಕೊಲ್ಲು ‘ ಎಂದವ ಅವನೇ .
‘ಆತ್ಮಕ್ಕೆ ಕಳಂಕವಿಲ್ಲ ’ ಎಂದವನೂ ಅವನೇ ; ‘ನೀನು ಯುಧ್ಧ ಮಾಡದೆ ಬಿಟ್ಟರೆ ನಿನ್ನ ಕುಲಕ್ಕೆ ಅಪಕೀರ್ತಿ ಬರುತ್ತದೆ ’ ಎಂದವ ಅವನೇ .
ಒಂದೇ ಗಂಟಲಲ್ಲಿ ಇವನ್ನೆಲ್ಲ ನುಂಗುವುದು ತುಂಬ ಕಷ್ಟವಲ್ಲವೇ?
ಅವು ಮಾತಿನ ಚಮತ್ಕಾರಗಳೆನೋ ಹೌದು . ಅದರಲ್ಲಿ ನಂಬಿಕೆ ಹುಟ್ಟುವುದಿಲ್ಲ ನನಗೆ .
ದೇವರು (?) ಕೊಟ್ಟ ಆಯುಷ್ಯವನ್ನು ಇದ್ದಷ್ಟು ಕಾಲ ಉಳಿದ ಮಕ್ಕಳ ಜೊತೆ ಬಾಳಿ ಬದುಕುವುದೇ ಪೂಜೆ ಎಂಬ ಬುಧ್ಧಿ ಯಾಕೆ ಬರಬಾರದು ನಮಗೆ ?