ಬುಧವಾರ, ನವೆಂಬರ್ 14, 2012

ಹಣತೆ - ಜಿ.ಎಸ್ . ಶಿವರುದ್ರಪ್ಪ







ಹಣತೆ ಹಚ್ಚುತ್ತೇನೆ ನಾನೂ 
ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ  ಜಿದ್ದಿನಿಂದಲ್ಲ 
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ 
ಇದರಲ್ಲಿ ಮುಳುಗಿ ಕರಗಿರುವಾಗ 
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ 

ಹಣತೆ ಹಚ್ಚುತ್ತೇನೆ ನಾನೂ 
ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ ಆಸೆಯಿಂದಲ್ಲ 
ಕತ್ತಲಿನಿಂದ ಕತ್ತಲಿಗೆ ತಡಕಾಡಿಕೊಂಡು ಬಂದಿವೆ  
ಹೆಜ್ಜೆ ಶತಮಾನದಿಂದಲೂ 

ನಡು ನಡುವೆ ಒಂದಷ್ಟು ಬೆಳಕು ಬೇಕೆಂದು 
ಆಗಾಗ ಕಡ್ಡಿ ಗೀಚಿದ್ದೇವೆ, ದೀಪ ಮುಡಿಸಿದ್ದೇವೆ.
ವೇದ, ಶಾಸ್ತ್ರ , ಪುರಾಣ, ಇತಿಹಾಸ, ಕಾವ್ಯ , ವಿಜ್ಞಾನಗಳ 
ಮತಾಪು, ಪಟಾಕಿ, ಸುರುಸುರು ಬತ್ತಿ , ಹೂ ಬಾಣ ಸುಟ್ಟಿದ್ದೇವೆ
ತಮಸೋಮ ಜ್ಯೋತಿರ್ಗಮಯ  
ಎನ್ನುತ್ತಾ ಬರೀ ಬೂದಿಯನ್ನೇ ಕೊನೆಗೆ ಕಂಡಿದ್ದೇವೆ

ನನಗೂ ಗೊತ್ತು, ಕತ್ತಲೆಗೆ
ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತಿಂದರೂ
ಕುಡಿದರೂ ಇದಕ್ಕೆ ಇನ್ನೂ ಬೇಕು 
ಇನ್ನೂ ಬೇಕು ಎನ್ನುವ ಬಯಕೆ 

ಆದರೆ ಹಣತೆ ಹಚ್ಚುತ್ತೇನೆ ನಾನೂ 
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ 
ಇರುವಷ್ಟು ಹೊತ್ತು ನಿನ್ನ ಮುಖ ನಾನು ನಿನ್ನ  ಮುಖ ನೀನು  
ನೋಡಬಹುದೆಂಬ ಒಂದೇ ಒಂದು ಆಸೆಯಿಂದ 
ಹಣತೆ ಆರಿದ ಮೇಲೆ,  ನೀನು ಯಾರೋಮತ್ತೆ
ನಾನು ಯಾರೋ





ಗುರುವಾರ, ನವೆಂಬರ್ 1, 2012

ಕನ್ನಡ ತಾಯಿಯ ಸುಪ್ರಭಾತ - ಚಂದ್ರಶೇಖರ ಕಂಬಾರ




ಮುಂಗೋಳಿ ಕುಗ್ಯಾವು ಮೂಡಣ ಬೆಳಗಿ
ತಂಗಾಳಿ ಬೀಸ್ಯಾವು ತವರೀ ಹೂವರಳಿ
ಹೂ ಹೂವಿನೊಳಗೊಂದು ಕೈಲಾಸವರಳ್ಯಾವು
ಕೈಲಾಸ ಕೈ ಮುಗಿದು ಭೂ ಲೋಕಕಿಳಿದಾವು
ಸಾವಿರದ ಶರಣವ್ವ ಕನ್ನಡದ ತಾಯೇ

ಸೂಸು ನಗೆಯಲಿ ಜಗದ ಲೇಸ ತುಳುಕಿಸುವವಳೆ
ಕಲ್ಲಿನ ಎದೆಯೊಳಗೆ ಹುಲ್ಲು ಚಿಗುರಿಸುವವಳೆ
ಹಕ್ಕಿ ಹಾರ್ಯಾಡ್ಯಾವು ಹಾಡೂತ, ಏನಂತ?
ಉಧೊ ನಿನ್ನ ಪಾದಕ್ಕೆ ಆದಿ ಮೂರುತಿಯೇ
ಸಾವಿರದ ಶರಣವ್ವ ಕನ್ನಡದ ತಾಯೇ

ಪಡುಗಡಲ ತೆರೆಗಳಲಿ ಪಾದ ತೊಳೆವವಳೆ
ಬೆಟ್ಟ ಬಯಲಿನ ಹಸಿರ ತೊಟ್ಟು ನಿಂತವಳೆ
ಮಲೆನಾಡ ಶಿಖರದಲಿ ಮಳೆಬಿಲ್ಲ ಮುಡಿದವಳೆ
ಅವ್ವಾ ಅಂದಾಗೊಮ್ಮೆ ಸಾಕಾರಗೊಂಬವಳೆ
ನಗುಮೊಗದ ಜಗದಂಬೆ ಬೆಳಕಿನ ತಾಯೇ

ಕುರಿತು ಓದದ ಕಾವ್ಯ ಪರಿಣತರ ಮಾತೆ
ಸಂತರ ಶರಣರ ಮಂತ್ರದ ಮಾತೆ
ಶಬ್ದಕ್ಕ ಬೆಳಕನ್ನ ಮುಡಿಸುವ ಕವಿಗಣ
ದಿನಬೆಳಗು ಹೊಗಳುವರು ನಿನ್ನ ಕೀರ್ತಿಯನೆ
ಸಾವಿರದ ಶರಣವ್ವ ಕನ್ನಡದ ತಾಯೇ

ಜಾಣ ಜಾಣೆಯರೆದೆಗೆ ಕನಸು ಕೊಡುವವಳೆ
ಬಾಗಿದವರಿಗೆ ಭಾಗ ಹೃದಯ ಕೊಡುವವಳೆ
ನಿನ್ಹಾಂಗ ಧರ್ಮದಲಿ ಧಾರಾಳತನದಲ್ಲಿ
ಇನ್ನೊಬ್ಬರನು ಕಾಣೆ ಧರೆಗೆ ದೊಡ್ಡವಳೆ
ಸಾವಿರದ ಶರಣವ್ವ ಕನ್ನಡದ ತಾಯೇ

 ಮ್ಯಾಲೇಳು ಲೋಕಕ್ಕ ಕೀಳೇಲು ಲೋಕಕ್ಕ
ಅಧಿಕವಾಗಲಿ ಹಬ್ಬಿ ನಿನ್ನ ಕಾರಣಿಕ
ಹಾಲೊಕ್ಕಲಾಗಲಿ ಹೊನ್ನೊಕ್ಕಲಾಗಲಿ
ತೂಗು ತೊಟ್ಟಿಲ ಬೆಳ್ಳಿ ಬಟ್ಟಲದ ತಾಯೇ
ಸಾವಿರದ ಶರಣವ್ವ ಕನ್ನಡದ ತಾಯೇ